ತುಳಸಿ ಹಬ್ಬದ ಮಹತ್ವ | Janata news
ಮೈಸೂರು : ಚಾಂದ್ರಮಾನ ಕಾರ್ತಿಕಮಾಸ ಶುಕ್ಲ ಪಕ್ಷದ 12ನೇ ದಿನವೆಂದರೆ ದ್ವಾದಶಿಯಂದು ತುಳಸಿ ಹಬ್ಬ ಅಥವಾ ತುಳಸಿ ಪೂಜೆಯನ್ನು ಮಾಡುತ್ತಾರೆ. ಔಷಧ ಗುಣವುಳ್ಳ ಪವಿತ್ರ ತುಳಸಿಯನ್ನು ಪೂಜಿಸುವ ತುಳಸಿ ಹಬ್ಬ ತುಳಸಿ ಮದುವೆ. ಉತ್ಥಾನ ದ್ವಾದಶಿಯಂದು ಮದುವೆ ಎಂದು ಕರೆಯುವ ಪೂಜೆ ಜರುಗುವುದು ವಿಶೇಷ.
ಆಷಾಢ ಮಾಸದ ಪ್ರಥಮ ಏಕಾದಶಿಯಂದು ಆರಂಭವಾಗುವ ಚಾತುರ್ಮಾಸ ವ್ರತ ಈ ಉತ್ಥಾನ ದ್ವಾದಶಿಯಂದು ಪರಿಸಮಾಪ್ತಿಗೊಳ್ಳುತ್ತದೆ. ಈ ದಿನ ಕಳೆದ ನಾಲ್ಕು ತಿಂಗಳ ಕಾಲ ಯೋಗನಿದ್ರೆಯಲ್ಲಿರುವ ವಿಷ್ಣುವನ್ನು ಎಬ್ಬಿಸಿ, ತುಳಸಿಯೊಂದಿಗೆ ವಿವಾಹ ಮಾಡಲಾಗುತ್ತದೆ.
ತುಳಸಿ ಹಬ್ಬದಂದು ನೆಲ್ಲಿ ಟೊಂಗೆಯನ್ನು ಬೃಂದಾವನದಲ್ಲಿ ನೆಟ್ಟು, ನೆಲ್ಲಿಕಾಯಿಯಿಂದಲೇ ಸಂಜೆ ಆರತಿ ಬೆಳಗುವುದು ವಿಶೇಷ. ನೆಲ್ಲಿಕಾಯಿಗೆ ಧಾತ್ರಿ ಎನ್ನುತ್ತಾರೆ. ಧಾತ್ರಿ ಎಂದರೆ ಲಕ್ಷೀ ಎಂದರ್ಥ. ತುಳಸಿ ಎಲ್ಲಿದೆಯೋ ಅಲ್ಲಿ ಹರಿ ಸನ್ನಿಧಾನವಿದೆ. ಹೀಗಾಗಿ, ಶ್ರೀಹರಿಯ ಜತೆ ಲಕ್ಷ್ಮೀಯನ್ನು ಪೂಜಿಸುವ ಉದ್ದೇಶದಿಂದ ನೆಲ್ಲಿಯ ಟೊಂಗೆಯನ್ನು ತುಳಸಿಯ ಜತೆ ಇಟ್ಟು ತುಳಸಿಗೆ ಮದುವೆ ಮಾಡುತ್ತಾರೆ.
ತುಳಸಿಗೆ ಅರಿಶಿಣ ಕುಂಕುಮ ಹಚ್ಚಿ, ಹೂವುಗಳಿಂದ ಸಿಂಗರಿಸಿ ನಂತರ ವಿಷ್ಣುಸೂಕ್ತ ಪಠಿಸುತ್ತಾ ಪೂಜೆ ಮಾಡುವುದು ಶ್ರೇಷ್ಠ. ಕಾರ್ತಿಕ ಮಾಸದಲ್ಲಿ ಬೇಗ ಕತ್ತಲಾಗುವುವದರಿಂದ ಪ್ರತಿದಿನವೂ ತುಳಸಿ ಕಟ್ಟೆಯ ಮುಂದೆ ದೀಪ ಹಚ್ಚಿಡುವ ಪದ್ಧತಿ ಇದೆ.
ಪೌರಾಣಿಕ ಹಿನ್ನೆಲೆ -
ಸಮುದ್ರಮಥನ ಸಮಯದಲ್ಲಿ ಬಂದು ಅಮೃತ ಕಳಸವನ್ನು ಮಹಾವಿಷ್ಣು ಪಡೆದುಕೊಳ್ಳುವಾಗ ಆತನ ನೇತ್ರದಿಂದ ಆನಂದಬಾಷ್ಪ ಉಕ್ಕಿ ಬಂತು. ಅದರ ಒಂದು ಹನಿ ಕಳಸದಲ್ಲಿ ಬಿದ್ದಾಗ ತುಳಸಿ ಗಿಡವಾಯಿತು. ಲಕ್ಷ್ಮೀಯೊಂದಿಗೆ ತುಳಸಿಯನ್ನೂ ವಿಷ್ಣು ಮದುವೆಯಾದನೆಂದು ಹೇಳಲಾಗುತ್ತದೆ.
ಅಮೃತದಿಂದ ಜನಿಸಿದಂತಹ ತುಳಸಿಯನ್ನು ಯಾವ ವಿಧವಾಗಿ ಉಪಯೋಗಿಸಿದರೂ ಅದು ಅಮೃತಮಯವಾಗುತ್ತದೆ. ಇಷ್ಟು ಪವಿತ್ರವಾದ ತುಳಸಿ ಶ್ರೀಮನ್ನಾರಾಯಣನಿಗೆ ಲಕ್ಷ್ಮಿಯಷ್ಟೇ ಪ್ರಿಯಳು. ಆದುದರಿಂದಲೇ ಮೂರೂ ಲೋಕಗಳಲ್ಲಿ ತುಳಸಿಗೆ ಸಮಾನವಾದುದು ಯಾವುದೂ ಇಲ್ಲ ಎಂದು ತಿಳಿಯಲಾಗಿದೆ.
ತುಳಸಿ ವಿವಾಹದ ಹಬ್ಬಕ್ಕೂ ಹಿನ್ನೆಲೆಯಿದೆ. ಆತನೊಬ್ಬ ಭಯಂಕರ ರಾಕ್ಷಸ. ಹೆಸರು ಜಲಂಧರ. ಆತನ ಪತ್ನಿ ವೃಂದಾ, ಪತಿವ್ರತೆ. ಅದಕ್ಕಾಗಿಯೇ ಜಲಂಧರನಿಗೆ ಸೋಲು ಎಂಬುದೇ ಇರಲಿಲ್ಲ. ಇದರಿಂದ ಅಹಂಕಾರದ ಮುದ್ದೆಯಾದ ಜಲಂಧರ ದೇವತೆಗಳ ಮೇಲೆ ಯುದ್ಧ ಮಾಡಿ ಸೋಲಿಸುತ್ತಾನೆ. ಈತನ ಉಪಟಳ ತಾಳಲಾಗದ ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ. ಇದರಿಂದ ಜಲಂಧರನ ವೇಷಧರಿಸಿದ ವಿಷ್ಣು ವೃಂದಾಳ ಪಾತಿವ್ರತ್ಯವನ್ನು ಭಂಗ ಮಾಡುತ್ತಾನೆ. ಜಲಂಧರ ಯುದ್ಧದಲ್ಲಿ ಸಾಯುತ್ತಾನೆ. ಇದರಿಂದ ಕೋಪಗೊಂಡ ವೃಂದಾ, ವಿಷ್ಣುವಿಗೆ ಶಾಪನೀಡಿ ತನ್ನ ಪತಿಯ ಶವದೊಂದಿಗೆ ಅಗ್ನಿಗೆ ಹಾರುತ್ತಾಳೆ. ಆನಂತರ ವೃಂದಾ ತುಳಸಿಯಾಗಿ ಪಾರ್ವತಿ ತಯಾರಿಸಿದ ಬೃಂದಾವನದಲ್ಲಿ ಜನಿಸುತ್ತಾಳೆ. ಇವಳೇ ರುಕ್ಮಿಣಿಯಾಗಿ ಕಾರ್ತಿಕ ಶುದ್ಧ ದ್ವಾದಶಿಯಂದು ಕೃಷ್ಣನನ್ನು ವಿವಾಹವಾಗುತ್ತಾಳೆ ಎಂಬ ಪ್ರತೀತಿಯಿದೆ.
ಇಷ್ಟೆಲ್ಲಾ ಪೌರಾಣಿಕ ಹಿನ್ನೆಲೆಯಿರುವ ತುಳಿಸಿಯಲ್ಲಿ ಸಾಕಷ್ಟು ಔಷಧೀಯ ಗುಣಗಳೂ ಇವೆ. ಕ್ರಿಮಿ, ಕೀಟಗಳೂ ಮನೆಯೊಳಗೆ ಹೋಗದಂತೆ ತಡೆಯುವ ಶಕ್ತಿ ಈ ಪುಟ್ಟ ಗಿಡಕ್ಕಿದೆ. ಆ ಕಾರಣಕ್ಕೆ ಪ್ರತಿಯೊಬ್ಬ ಹಿಂದೂವಿನ ಮನೆಯಲ್ಲಿಯೂ ತುಳಸಿ ಕಟ್ಟೆ ಅಥವಾ ಗಿಡವಿದ್ದು, ಜನರು ಭಯ ಭಕ್ತಿಯಿಂದ ಪೂಜಿಸುತ್ತಾರೆ.